ಮಹಾಮಂಡಳದಲ್ಲಿ ಕೋಟಿ ರೂ. ಅವ್ಯವಹಾರ ಆರೋಪ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ

 


ಬೆಂಗಳೂರು, ಜೂನ್ 11: ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳದಲ್ಲಿ ನಡೆದಿರುವ ಕೋಟಿ ರೂಪಾಯಿ ಹಣಕಾಸು ಅವ್ಯವಹಾರ ಮತ್ತು ದುರುಪಯೋಗದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಹಾಮಂಡಳದ ನಿರ್ದೇಶಕ ಎಸ್. ಚಂದ್ರಶೇಖರ್ ಆಗ್ರಹಿಸಿದರು.

ಪ್ರೆಸ್ ಕ್ಲಬ್ ಆಫ್ ಬೆಂಗಳೂರುದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಅಧ್ಯಕ್ಷರಾದ ಕೆ. ಲಲಿತಾ, ಜಿ.ಟಿ. ದೇವೇಗೌಡ, ಸಿ.ಎಂ. ಮಾರೇಗೌಡ ಹಾಗೂ ವಿ. ರಾಜು ಅವರ ಅಧಿಕಾರಾವಧಿಯಲ್ಲಿ ಹಣಕಾಸು ಅಕ್ರಮಗಳು ನಡೆದಿರುವುದು ತನಿಖಾ ಹಾಗೂ ಮರುಲೆಕ್ಕಪರಿಶೋಧನಾ ವರದಿಗಳಲ್ಲಿ ಬಹಿರಂಗವಾಗಿದೆ ಎಂದು ಆರೋಪಿಸಿದರು.

ಈ ಸಂಬಂಧ 2024ರ ಅಕ್ಟೋಬರ್‌ನಲ್ಲಿ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ಸಿಐಡಿಗೆ ವರ್ಗಾಯಿಸಲಾಗಿದೆ. ಆದರೆ ಇಂದಿಗೂ ಆರೋಪಪಟ್ಟಿ ಸಲ್ಲಿಕೆಯಾಗದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.

ಸಹಕಾರ ಇಲಾಖೆ ಆದೇಶದಂತೆ ನಡೆದ ತನಿಖೆ ಮತ್ತು ಮರುಲೆಕ್ಕಪರಿಶೋಧನೆಯಲ್ಲಿ ಹಣ ದುರುಪಯೋಗ ಹಾಗೂ ಆಡಳಿತಾತ್ಮಕ ಅಕ್ರಮಗಳು ದೃಢಪಟ್ಟಿವೆ ಎಂದು ತಿಳಿಸಿದ ಅವರು, ಮುಖ್ಯಮಂತ್ರಿ, ಲೋಕಾಯುಕ್ತ, ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಸಹಕಾರ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಶಿಸ್ತು ಕ್ರಮ ಕೈಗೊಳ್ಳದಿರುವುದನ್ನು ಪ್ರಶ್ನಿಸಿದರು.

ಸಿಐಡಿ ತನಿಖೆಯನ್ನು ತ್ವರಿತಗೊಳಿಸಿ ಆರೋಪಪಟ್ಟಿ ಸಲ್ಲಿಸಬೇಕು ಹಾಗೂ ತಪ್ಪಿತಸ್ಥರಿಂದ ಸಹಕಾರಿಗಳ ಹಣವನ್ನು ವಸೂಲಿ ಮಾಡಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ ಅವರು, ಸದಸ್ಯರ ಸಂಪೂರ್ಣ ಹಣ ಮರುಪಡೆಯುವವರೆಗೆ ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಹಕಾರಿ ಕ್ಷೇತ್ರದ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.


Active Info Hub 9341997936

Comments

Popular posts from this blog

Mana Projects and Skanda Launch Premium Residential Tower ‘The Solitaire’ in East Bengaluru

ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಂದ ಜನಮನ ಸೆಳೆದ ವಿದ್ಯಾಪೀಠ ಕಾರ್ನರ್ ಫೆಸ್ಟ್-2026

New Zigly Centre in BTM Layout Brings Comprehensive Pet Care Closer to Residents